ಪ್ರವಾದಿ ಮೊಹಮ್ಮದರನ್ನು ನಿಂದಿಸುವ ಮೊದಲು ರಸೂಲರ ಬಗ್ಗೆ ಅಜಿತ್ ನೀನು ಎಷ್ಟು ಅಧ್ಯಯನ ನಡೆಸಿದ್ದೀಯ

ಪ್ರವಾದಿ ಮೊಹಮ್ಮದರನ್ನು ನಿಂದಿಸುವ ಮೊದಲು ರಸೂಲರ ಬಗ್ಗೆ ಅಜಿತ್ ತಾವು ಎಷ್ಟು ಅಧ್ಯಯನ ನಡೆಸಿದ್ದೀರಿ?, ಸ್ವಲ್ಪ ನಿಮ್ಮದೇ ಚಾನಲ್ ನಲ್ಲಿ ವಿವರಿಸಿ.
ಒಂದೋ ಪ್ರಾಮಾಣಿಕ  ಅಧ್ಯಯನ ನಡೆಸಿ ರಸೂಲರ ಜೀವನವನ್ನು ವಿವರಿಸುವ ಒಂದು ಪುಸ್ತಕ ಬರೆಯಿರಿ. ನಿಮಗಿದು ಬಹಿರಂಗ ಸವಾಲು. ಅಧ್ಯಯನ ನಡೆಸುವ ಶಕ್ತಿಯಿಲ್ಲದಿದ್ದರೆ ನೀವು ಯಾವ ವಿಚಾರವನ್ನಿಟ್ಟುಕೊಂಡು ನಿಂದಿಸಿದ್ದೀರೋ ಆ ವಿಚಾರದ ಕುರಿತಾದ್ರೂ ಬಲ್ಲವರಿಂದ ತಿಳಿದು ಜ್ಞಾನ ಹೆಚ್ಚಿಸಿಕೊಳ್ಳಿ. ನಿಮ್ಮ ಅವಿವೇಕತನದ ಆವೇಶಕ್ಕೆ ನಾಲಿಗೆ ಕೊಟ್ಟರೆ ಅದರಿಂದ ಯಾವ ದೇಶವೂ ಉದ್ಧಾರವಾಗೋದಿಲ್ಲ.
ಪ್ರವಾದಿ( ಸ.ಅ) ರ ಪ್ರತಿಯೊಂದು ವಿವಾಹವೂ ಅಲ್ಲಾಹನ ಇಚ್ಛೆಯಂತೆ ನಡೆದಿದೆಯೇ ಹೊರೆತು ಪ್ರವಾದಿಯ ಬಯಕೆಯಿಂದಲ್ಲ ಎಂಬುವುದು ಇಸ್ಲಾಂ ಇತಿಹಾಸ ಸಾರಿ ಹೇಳುತ್ತದೆ. ಪ್ರವಾದಿಯ ಮೊದಲ ಮದುವೆ ನಡೆದಿರೋದು ಅವರ ೨೫ ನೇ ವಯಸ್ಸಿನಲ್ಲಿ. ಮೊದಲ ಪತ್ನಿ ಖದೀಜಾ(ರ.ಅ) ಮಕ್ಕಾದ ಶ್ರೀಮಂತ ವ್ಯಾಪಾರಿ ವಿಧವೆ. ಅವರಿಗೆ ದೇವ ಸಂದೇಶಗಳು ಬರ ತೊಡಗಿದ್ದು ೪೦ ನೇ ಪ್ರಾಯದಲ್ಲಿ. ಎರಡನೇ ಮದುವೆ ನಡೆದಿರೋದು ೫೦ ನೇ ವರ್ಷದಲ್ಲಿ , ಮತ್ತೆ ವರಿಸಿದ್ದು ಸೌದಾ ಎಂಬ ವಿಧವೆಯನ್ನು. ಇದರ ನಂತರದಲ್ಲಿ ೫೦ ರಿಂದ ೬೩ನೇ ವಯಸ್ಸಿನ ಒಳಗೆ ನಡೆದ ಮದುವೆಗಳಲ್ಲಿ ವರಿಸಿದ್ದು ವಿಧವೆಯರನ್ನೇ. ಎಲ್ಲರೂ ಕೂಡ ಹಿರಿ ವಯಸ್ಸಿನ ವಿಧವೆಯರು. ರಸೂಲರು ಮದುವೆಯಾದ ಕನ್ಯೆ ಸ್ತ್ರೀ ಅದು ಹಝ್ರತ್ ಆಯಿಷಾ(ರ.ಅ). ಮಾತ್ರ. ಚರ್ಚೆಯ ವಿಷಯಕ್ಕೆ ಬರೋಣ. ರಸೂಲರ ೫೩ನೇ ವಯಸ್ಸಿನಲ್ಲಿ ಜಿಬ್ರೀಲ್ ದೇವ ಸಂದೇಶದೊಂದಿಗೆ ಬಂದು ರಸೂಲರಲ್ಲಿ ಆಯಿಷಾ ರನ್ನು ವರಿಸುವಂತೆ ಹೇಳುತ್ತಾರೆ. ಇದರಿಂದ ರಸೂಲರು ವಿಚಲಿತರಾದರೂ ಅವರು ದೇವಸಂದೇಶವನ್ನು ಆಯಿಷಾರ ತಂದೆ ಹಾಗೂ ತನ್ನ ಆತ್ಮೀಯ ಸ್ನೇಹಿತರಾದ  ಅಬೂಬಕ್ಕರ್ ಸಿದ್ದೀಕ್(ರ.ಅ) ರೊಂದಿಗೆ ತಿಳಿಸುತ್ತಾರೆ. ಸಿದ್ದೀಕರು ತನ್ನ ಮಗಳನ್ನು ರಸೂಲರಿಗೆ ವರಿಸಿಕೊಡುತ್ತಾರೆ. ಆಗ ಆಯಿಷಾಳ ವಯಸ್ಸು ಸುಮಾರು ೭ ರಿಂದ ೯. ಆದರೆ ಆಕೆ ರಸೂಲರ ಮನೆ ಪ್ರವೇಶಿಸುವುದು ಎರಡು ವರ್ಷದ ನಂತರ .ಆಗ ಆಕೆಯ ವಯಸ್ಸು ೯ ರಿಂದ ೧೧. ಈಗಲೂ ಕೂಡ ಮದ್ರಸದ ಕಲಿಕಾ ಪುಸ್ತಕವನ್ನು ತೆರೆದು ನೋಡಿದರೆ ಹೆಣ್ಣಿನ ಪ್ರೌಢಾವಸ್ಥೆಯ ಕನಿಷ್ಠ ಪ್ರಾಯ ೯ ಎಂದೇ ಇದೆ. ಇದು ೧೪೦೦ ವರ್ಷಗಳ ಹಿಂದಿನ ಪರಿಸ್ಥಿತಿಗೆ ಅನುಗುಣವಾಗಿ ಬರೆದಿರುವ ವಿಚಾರ ಎಂದು ಬಿಡಿಸಿ ಹೇಳಬೇಕಾಗಿಲ್ಲ. ಹೀಗಿರುವಾಗ  ಆಗಿನ ಕಾಲದ ಪರಿಸ್ಥಿತಿಗೆ ಅನುಗುಣವಾಗಿ ಮಾತನಾಡುವುದಾದರೆ ರಸೂಲರ ಮನೆ ಪ್ರವೇಶ ಪಡೆಯುವಾಗ ಆಯಿಷಾಳ ವಯಸ್ಸು ಈಗಿನ ಕಾಲದ ೧೪  ರಿಂದ ೧೬ ಎಂದರೂ ಅತಿಶಯೋಕ್ತಿಯಾಗಲಾರದು. ಜೊತೆಗೆ ಆಗಿನ ಕಾಲದಲ್ಲಿ ಹೆಣ್ಣನ್ನು ಪ್ರಾಪ್ತೆಯೆಂದು ಪರಿಗಣಿಸಬೇಕಾದರೆ ವಯಸ್ಸು ೧೬ ಆಗ ಬೇಕಿರಲಿಲ್ಲ. ಮುಟ್ಟು ಆರಂಭವಾದ ಹೆಣ್ಣನ್ನು ಪ್ರಾಪ್ತೆಯೆಂದೇ ಪರಿಗಣಿಸಲಾಗುತ್ತಿತ್ತು.ಇನ್ನೊಂದು ಗಮನಾರ್ಹ ವಿಚಾರವೇನೆಂದರೆ, ರಸೂಲರ ಮನೆಗೆ ಆಯಿಷಾಳನ್ನು ಕಳುಹಿಸಿಕೊಟ್ಟಾಗ, ರಸೂಲರು ಆಕೆಯನ್ನು ಅಕ್ಕರೆಯಿಂದ ತಲೆ ತಡವುತ್ತಾರಂತೆ, ಕೂಡಲೇ ತನ್ನ ತಂದೆಯ ಬಳಿ ಓಡಿ ಬಂದ ಆಯಿಷಾ " ರಸೂಲರಾಗಿದ್ದುಕೊಂಡು ಅನ್ಯ ಸ್ತ್ರೀ ಯಾದ ನನ್ನನ್ನು ಮುಟ್ಟಿದ್ದು ತಪ್ಪು ಅಲ್ವಾ? " ಎಂದು ಕೋಪದಿಂದ ತನ್ನ  ತಂದೆಯಲ್ಲಿ ಕೇಳುತ್ತಾರೆ. ಆಗ ತಂದೆ ನೀನು ರಸೂಲರ ಮಡದಿಯಾಗಿದ್ದಿ , ಹಾಗಾಗಿ ಅವರಿಗೆ ನಿನ್ನನ್ನು ಮುಟ್ಟುವ ಹಕ್ಕಿದೆ ಎಂದಾಗ ನಾಚಿ ಓಡುತ್ತಾರಂತೆ. ಆ ಕಾಲದಲ್ಲಿ ತನ್ನನ್ನು ರಸೂಲರು ಮುಟ್ಟಿದ್ದು ತಪ್ಪು ಎನ್ನುವಂತ ಭಾವ ಆಯಿಷಾಳಿಗೆ ಬಂದಿದ್ದರೆ ಅವರು ತೀರಾ ಅಪ್ರಾಪ್ತೆಯಾಗಿರಲಿಲ್ಲ ಎಂದು ಅರ್ಥ ತಾನೇ?.. ಈ ಚರಿತ್ರೆ ಮಾನ್ಯ ಅಜಿತ್ ರಿಗೆ ತಿಳಿದಿದೆಯೇ?. ಅದು ಶತ್ರುಗಳೊಂದಿಗೆ ಯುದ್ಧ ಮುಗಿಸಿ ಬಂದಂತಹ ಸಂದರ್ಭ. ಸೈನ್ಯದ ಜೊತೆ ಇದ್ದ ಆಯಿಷಾ ಧಿಕ್ಕುತಪ್ಪಿ ಕಾಣೆಯಾಗುತ್ತಾರೆ. ಜನರೆಲ್ಲಾ ಊರು ತಲುಪಿದರೂ ಆಯಿಷಾಳ ಪತ್ತೆ ಇಲ್ಲ. ಇತ್ತ ಆಯಿಷಾಳು ಒಬ್ಬ ಸ್ವಹಾಬಿಯ ಕಣ್ಣಿಗೆ ಕಂಡು ಅವರು ಆಯಿಷಾಳನ್ನು ಮನೆ ತಲುಪಿಸುತ್ತಾರೆ. ಈ ಕಾರಣದಿಂದ ಊರಿನಲ್ಲಿ ಆಯಿಷಾಳ ಚಾರಿತ್ರ್ಯದ ಕುರಿತು ವದಂತಿ ಹಬ್ಬಿಸುತ್ತಾರೆ.   ಎಲ್ಲರೂ ಆಯಿಷಾಳನ್ನು ದೂಷಿಸತೊಡಗುತ್ತಾರೆ. ಆಯಿಷಾಳಿಗೆ ಇದು ತಿಳಿದಿರುವುದಿಲ್ಲ. ರಸೂಲರಿಗೆ ದೇವನಿಂದ ಯಾವ ಸಂದೇಶವೂ ಬರುವುದಿಲ್ಲ. ರಸೂಲರನ್ನು ಅಸಹಾಯಕನನ್ನಾಗಿಸಿ ದೇವನ ಪರೀಕ್ಷೆ. ಸಂಗತಿ ತಿಳಿದ ಆಯಿಷಾ ನೋವಿನಿಂದ ಕುಸಿಯುತ್ತಾರೆ. ಅಲ್ಲಾಹನಲ್ಲಿ ಮೊರೆಯಿಡುತ್ತಾರೆ.ಮುಂದೆ ಆಯಿಷಾಳ ಶ್ರೇಷ್ಠತೆಯ ಕುರಿತು ಅಲ್ಲಾಹನೇ ತನ್ನ ಸಂದೇಶವನ್ನು ಕುರ್ಆನಿನಲ್ಲಿ ಸಾರುತ್ತಾನೆ. ಈ ವಿಚಾರದಲ್ಲಿ ಜ್ಞಾನಿಗಳು ಬರೆದಿರುವ ದೊಡ್ಡ ಅಧ್ಯಾಯಗಳೇ ಲಭ್ಯವಿದೆ. ಇದು ಅಜಿತನಿಗೆ ತಿಳಿದಿದೆಯೇ?. ಸಣ್ಣ ಪ್ರಾಯದ ಆಯಿಷಾಳ ಮೇಲೆ ಆರೋಪ ಬಂದಾಗ, ಇಡೀ ಊರೇ ಎದುರಾದಾಗ, ತನ್ನ ಪತಿ,ತಂದೆ, ತಾಯಿ ಅಸಹಾಯಕರಾದಾಗ ಆಯಿಷಾಳ ನೆರವಿಗೆ ಸ್ವತಃ ಅಲ್ಲಾಹನೇ ಬಂದು ಕುರ್ಆನಿನಲ್ಲಿ ಆಕೆಯ ಶ್ರೇಷ್ಠತೆಯನ್ನು ಸಾರುತ್ತಾನೆಂದಾದರೇ ಆಯಿಷಾ(ರ) ಅದೆಂಥಾ ಶ್ರೇಷ್ಠ ವ್ಯಕ್ತಿತ್ವ ಆಗಿರಬೇಡ. ಇನ್ನು ಪ್ರವಾದಿ ಕನ್ಯೆಯನ್ನು ವಿವಾಹವಾಗಿರುವುದು ತನ್ನ ದೈಹಿಕ ಸುಖದ ಉದ್ದೇಶಕ್ಕಾಗಿ ಆಗಿದ್ದಿದ್ರೆ ಪ್ರವಾದಿಗಳ ಜನನಕ್ಕೂ ಮುಂಚೆಯೇ ತಂದೆ ಮಗಳೊಂದಿಗೆ ವ್ಯಭಿಚಾರ ನಡೆಸುವಷ್ಟು ಕುಲಗೆಟ್ಟು ಹೋಗಿದ್ದ ಜನಸಮೂಹಕ್ಕೆ ವ್ಯಭಿಚಾರ ಹರಾಮಾಗಿಸುವ ಅವಶ್ಯಕತೆ ರಸೂಲರಿಗೆ ಇರುತ್ತಿತ್ತೇ?, ವಿವಾಹೇತರ ಸಂಬಂಧವನ್ನು  ವಿರೋಧಿಸುವುದು ಬೇಕಿತ್ತೇ?, ೨೫ ರಲ್ಲಿ ವಿಧವೆಯನ್ನು ಮದುವೆಯಾಗಿ ೫೦ ರ ನಂತರ ಬಹುಪತ್ನಿತ್ವ ಹೊಂದುವ ಜರೂರತ್ತು ಇರುತ್ತಿತ್ತೇ?. ಆ ಕೆಲಸವನ್ನು ಮೊದಲೇ ಮಾಡಬಹುದಿತ್ತಲ್ವೇ?. ಇವೆಲ್ಲಾ ಪ್ರಶ್ನೆಗಳನ್ನು ಅಜಿತ್ ಕನಿಷ್ಠ ತನ್ನನ್ನು ಕೇಳಿಕೊಂಡಿರುವರೇ?. ಪ್ರವಾದಿಗಳು ೫೩ರಲ್ಲಿ ಆಯಿಷಾಳನ್ನು ವಿವಾಹವಾಗಿ ೬೩ರಲ್ಲಿ ಆಕೆಯ ಮಡಿಲಲ್ಲೇ ಮರಣ ಹೊಂದುತ್ತಾರೆ. ಅಂದರೆ  ಆಯಿಷಾಳ ಜೊತೆ ಕೇವಲ ೧೦  ವರ್ಷ ದ ದಾಂಪತ್ಯ, ಕೇವಲ ೮ ವರ್ಷದ ಸಂಸಾರ. ರಸೂಲರ ಪತ್ನಿ ಅಂದ ಮೇಲೆ ಆಯಿಷಾ " ಉಮ್ಮುಆತಿಲ್ ಮುಅ್ಮಿನೀನ್" ಅಂದರೆ "ವಿಶ್ವಾಸಿಗಳ ತಾಯಿ", ರಸೂಲರ ನಂತರ ಆಕೆ ಉಳಿದವರೆಲ್ಲರಿಗೂ ತಾಯಿಗೆ ಸಮಾನ. ಯಾರನ್ನೂ ಆಕೆ ಮದುವೆಯಾಗುವ ಹಾಗಿಲ್ಲ. ರಸೂಲರ ಮರಣದ ನಂತರ ಆಯಿಷಾಳದ್ದು ೮೦ ವರುಷಗಳ ಒಂಟಿ ಜೀವನ. ಅವರ ಈ ಒಂಟಿ ಆಧ್ಯಾತ್ಮಿಕ ಜೀವನ ಯಾವ ಸ್ತ್ರೀ ಸಂವೇದನೆಯ ಸಾಹಿತ್ಯಕ್ಕೂ ಇಲ್ಲಿವರೆಗೆ ನಿಲುಕಿರಲಿಕ್ಕಿಲ್ಲ. ಇನ್ನು ಅಜಿತ್ ರಂತಹ ಮನುವಾದಿಗೆ ನಿಲುಕೀತೇ?. ಪ್ರವಾದಿಯವರೊಂದಿಗೆ ಆಯಿಷಾಳ ಮದುವೆ ಅದು ಆಯಿಷಾಳಿಗೆ ಇದ್ದಿದ್ದ ಪರೀಕ್ಷೆಯಾಗಿತ್ತೇ ವಿನಃ ರಸೂಲರಿಗೆ ಆಗಿರಲಿಕ್ಕಿಲ್ಲ ಅನ್ನೋದು ನನ್ನ ವಾದ. " ಸತ್ಯ ವಿಶ್ವಾಸಿಗಳ ತಾಯಿ" ಯಾಗುವುದು ಅಂದರೆ ಇನ್ನೇನು ಸುಲಭವೇ?...

-- ಇರ್ಫಾನ್ ಹಕ್

Comments

Popular posts from this blog

ಬಾಬಾ ಸಾಹೇಬರ ಈ 10 ನುಡಿಗಳು ಯಾವುದೇ ಸಮಾಜವನ್ನು ಬದಲಾಯಿಸಬಲ್ಲವು!

ಹಾಶಿಂಪುರ ಹತ್ಯಾಕಾಂಡಕ್ಕೆ 31 ವರ್ಷಗಳು.!

ಜಿಹಾದ್ ಎಂದರೇನು..!?