ತನ್ನ ಸಂಪತ್ತನ್ನೆಲ್ಲಾ ಬಡವರಿಗಾಗಿ ಧಾರೆ ಎರೆದು ಇಹಲೋಕ ತ್ಯಜಿಸಿದ ಕ್ಯಾನ್ಸರ್ ಪೀಡಿತ ಅಲಿ ಬನಾತ್!

ತನ್ನ ಸಂಪತ್ತನ್ನೆಲ್ಲಾ ಬಡವರಿಗಾಗಿ ಧಾರೆ ಎರೆದು ಇಹಲೋಕ ತ್ಯಜಿಸಿದ ಕ್ಯಾನ್ಸರ್ ಪೀಡಿತ ಅಲಿ ಬನಾತ್!

✍️ಎಸ್.ಎ.ರಹಿಮಾನ್ ಮಿತ್ತೂರು


ಅಲಿ ಬನಾತ್.. ಈ ಹೆಸರು ಕೇಳದವರು ಬಹಳ ವಿರಳ. ಆಸ್ಟ್ರೇಲಿಯಾದ ಪ್ರಜೆಯಾದ ಅಲಿ ಬನಾತ್ ಎಂಬ ಯುವಕ ಹುಟ್ಟಿನಿಂದಲೇ ಅಗರ್ಭ ಶ್ರೀಮಂತ. ಧರ್ಮ ನಿಷ್ಠೆಯಿಂದ ಎಲ್ಲರೊಂದಿಗೂ ಸಂತೋಷಮಯವಾಗಿ ನಗುನಗುತ್ತಾ ಜೀವನ ಸಾಗಿಸುತ್ತಾ ಇದ್ದ ಅಲಿ ಬನಾತ್ ಪಾಲಿಗೆ 2015ರಲ್ಲಿ ಒಂದು ಅಘಾತಕಾರಿ ಸುದ್ಧಿ ಕಿವಿಗೆ ಅಪ್ಪಳಿಸುತ್ತದೆ. ಅದುವೇ ತನ್ನನ್ನು ಮರಣದ ಕೂಪಕ್ಕೆ ಕೊಂಡೊಯ್ಯುತ್ತಿರುವ ಕ್ಯಾನ್ಸರ್ ಎಂಬ ಮಾರಕ ರೋಗ ತನ್ನನ್ನು ಆವರಿಸಿರುವ ಸುದ್ಧಿ. ತಾನಿನ್ನು ಕೆಲವೇ ವರ್ಷ ಮಾತ್ರ ಬದುಕಿ ಉಳಿಯಲಿದ್ದೇನೆ ಎಂಬ ವಾಸ್ತವಾಂಶವನ್ನು ಆಸ್ಪತ್ರೆಯ ವೈದ್ಯರು ತನ್ನ ಮುಂದೆ ಬಿಚ್ಚಿಟ್ಟಾಗ ಅಲಿ ಬನಾತ್ ದೃತಿಗೆಡಲಿಲ್ಲ. ಎಲ್ಲವೂ ಅಲ್ಲಾಹನ ಇಚ್ಚೆಯಾಗಿದೆ ಎಂದು ಹೇಳಿ ನಿರಾಳರಾದರು.


ತನಗೆ ಹೆಚ್ಚು ದಿನ ಬದುಕಲು ಸಾಧ್ಯವಿಲ್ಲ ಎಂದರಿತ ಅಲಿ ಬನಾತ್ , ಅಂದಿನಿಂದ ಒಂದು ನಿರ್ಧಾರಕ್ಕೆ ಬಂದರು. ಇನ್ನುಮುಂದೆ ತನ್ನಲ್ಲಿರುವ ಹಣವನ್ನು ಬಡವರ ಏಳಿಗೆಗಾಗಿ ವಿನಿಯೋಗಿಸುವುದು ಎಂದು ನಿರ್ಧರಿಸಿದ ಅಲಿ ಬನಾತ್ ‘ಮುಸ್ಲಿಂ ಅರೌಂಡ್ ದಿ ವರ್ಲ್ಡ್’ ಎಂಬ ಚಾರಿಟಿ ಸಂಸ್ಥೆಯೊಂದನ್ನು ಸ್ಥಾಪಿಸಿದರು. ಆಫ್ರಿಕಾ ಖಂಡದಲ್ಲಿರುವ ಟೋಗೊ ಎಂಬ ಪ್ರದೇಶದಲ್ಲಿ ವಾಸಿಸುತ್ತಿರುವ ಜನರು ಹಸಿವೆಯಿಂದ ಸಾವನ್ನಪ್ಪುತ್ತಿರುವುದು ಹಾಗೂ ಧಾರ್ಮಿಕ ಹಾಗೂ ಲೌಕಿಕ ಶಿಕ್ಷಣಗಳಿಂದ ವಂಚಿತರಾಗುತ್ತಿರುವುದನ್ನು ಅರಿತ ಅಲಿ ಬನಾತ್, ತಾನೇ ಸ್ವತಹ ಅಲ್ಲಿಗೆ ತೆರಲಿ ಅವರ ಸೇವೆಯಲ್ಲಿ ನಿರತರಾದರು. ಈ ಮೂಲಕ ಏಷ್ಯಾ. ಆಫ್ರಿಕಾ ಆಸ್ಟ್ರೇಲಿಯಾ ಸೇರಿದಂತೆ ವಿಶ್ವದ ಮೂಲೆ ಮೂಲೆಯಲ್ಲಿರುವ ಬಡವರ ಕಷ್ಟಗಳನ್ನು ಪರಿಹರಿಸಲು ಪ್ರಯತ್ನಿಸಿದರು.


ಆಫ್ರಿಕಾದಲ್ಲೇ ಆಲಿ ಬನಾತ್ ಕಟ್ಟಿಸಿದ ಶಾಲೆ ಮಸೀದಿ ಹಾಗೂ ಮದರಸಗಳಿಗೆ ಲೆಕ್ಕವೇ ಇಲ್ಲ. ನೀರಿಗಾಗಿ ಕೊರೆಸಿದ ಬೋರ್ ವೆಲ್ ಗಳು ಅದೆಷ್ಟೋ. ಬಡವರ ಹಸಿವು ನೀಗಿಸಲು ನೀಡಿದ ಆಹಾರ ಪಾನೀಯಗಳು ನಮ್ಮ ಊಹೆಗೆ ನಿಲುಕದಷ್ಟು. ಈ ಕಾರಣದಿಂದಲೇ ಈ ಪ್ರದೇಶದ ಜನರ ಮನಸ್ಸಿನಲ್ಲಿ ಸದಾ ಅಚ್ಚಲಿಯದೇ ಉಳಿದಿದ್ದಾರೆ ಅಲಿ ಬನಾತ್.


ತನಗೆ ಬಾಧಿಸಿರುವ ಕ್ಯಾನ್ಸರ್ ರೋಗವು ನೀಡುತ್ತಿರುವ ಸಹಿಸಲಾಗದ ನೋವಿನ ನಡುವೆಯೂ ಬಡ ಮಕ್ಕಳೊಂದಿಗೆ ನಗುಮುಖದೊಂದಿಗೆ ಸಂತೋಷವನ್ನು. ಹಂಚಿಕೊಳ್ಳುತ್ತಿದ್ದ ಅಲಿ ಬನಾತ್ ಈಗ ನೆನಪು ಮಾತ್ರ. ತನ್ನ ಸಂಪತ್ತನ್ನು ಬಡವರಿಗಾಗಿ ದಾರೆ ಎರೆದಿದ್ದ ಆಸ್ಟ್ರೇಲಿಯಾದ ಮಲ್ಟಿ ಮಿಲಿಯನರ್ ಅಲಿ ಬನಾತ್ ಅವರು ನಿನ್ನೆ ಆಸ್ಟ್ರೇಲಿಯಾ ಸಮಯ ಮಗ್ರಿಬ್‌ನ ಸ್ವಲ್ಪ ಮುಂಚೆ ನಿಧನರಾದರು.


ತನ್ನ ಮರಣಕ್ಕಿಂತ ಕೆಲವೇ ಸಮಯದ ಹಿಂದೆ ತನ್ನ ಆರೋಗ್ಯಕ್ಕಾಗಿ ಪ್ರಾರ್ಥಿಸುವಂತೆ ಲೋಕದ ಜನರಲ್ಲಿ ವಿನಂಸಿಕೊಂಡಿದ್ದ ಅಲಿ ಬನಾತ್ ಈಗ ಕೇವಲ ನೆನಪು ಮಾತ್ರ. ನನಗೆ ಬಂದಿರುವ ಕ್ಯಾನ್ಸರ್ ರೋಗವು ಸರ್ವಶಕ್ತನ ಕಡೆಯಿಂದ ನನಗೆ ಬಂದ ಉಡುಗೊರೆಯಾಗಿದೆ. ಒಂದು ವೇಳೆ ಈ ರೋಗ ನನ್ನನ್ನು ಕಾಡದೇ ಇರುತ್ತಿದ್ದರೇ ಬಡವರಸೇವೆ ಮಾಡಲು ನನ್ನಿಂದ ಸಾಧ್ಯವಾಗುತ್ತಿರಲಿಲ್ಲ ಎಂದು ಹನ್ಮುಖಿಯಾಗಿ ದೇವನು ತನಗೆ ಕೊಟ್ಟ ರೋಗವನ್ನು ಎರಡೂ ಕೈಗಳಿಂದ ಸ್ವೀಕರಿಸಿ ನಗುನಗುತ್ತಲೇ ಈ ಭೂಮಿಯಿಂದ ವಿರಮಿಸಿದ ಅಲಿ ಬನಾತ್ ಎಂಬ ಚೇತನವನ್ನು ಮರೆಯಲು ಈ ಮನುಕುಲಕ್ಕೆ ಎಂದೆಂದಿಗೂ ಸಾಧ್ಯವಿಲ್ಲ.


-ಎಸ್.ಎ.ರಹಿಮಾನ್ ಮಿತ್ತೂರು

Comments

Popular posts from this blog

ಬಾಬಾ ಸಾಹೇಬರ ಈ 10 ನುಡಿಗಳು ಯಾವುದೇ ಸಮಾಜವನ್ನು ಬದಲಾಯಿಸಬಲ್ಲವು!

ಹಾಶಿಂಪುರ ಹತ್ಯಾಕಾಂಡಕ್ಕೆ 31 ವರ್ಷಗಳು.!

ಜಿಹಾದ್ ಎಂದರೇನು..!?